ಸ್ವಾಮಿಯವರು ತಮ್ಮ ಕಥೆಗಳಲ್ಲಿ ಜಟಿಲ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಅವರ ಕಥೆಗಳಲ್ಲಿ ಆಧುನಿಕತೆ, ಸಹಜ ಬದುಕು, ನೈತಿಕತೆ, ಪರೋಪಕಾರ, ಸ್ವಾರ್ಥ, ಈ ಎಲ್ಲವೂ ವಿಚಿತ್ರ ರೀತಿಯಲ್ಲಿ ಮುಖಾಮುಖಿಯಾಗಿ ನಮ್ಮಮುಂದೆ ನಿಲ್ಲುತ್ತವೆ . ಸಾಮಾನ್ಯವಾಗಿ ಈ ರೀತಿ ವಸ್ತುಗಳನ್ನು ಕಥೆಗಾರ ಆಯ್ದು ಕಥೆಹೆಣೆಯುವಾಗ ಅದರಲ್ಲಿ ಕಥೆಗಾರನ ನಿಲುವು ಸೂಕ್ಷ್ಮವಾಗಿ ನಮಗೆ ಗೋಚರಿಸುತ್ತದೆ. ಪತ್ರಿಕೆಗಳಿಗೆ ರಾಜಕಾರಣಿಗಳನ್ನು ಸಂದರ್ಶನ ಮಾಡುವ ಪತ್ರಕರ್ತರು ಎಷ್ಟೇ ತಟಸ್ಥರೆಂದು ಕಂಡರೂ, ಅವರು ಸಂದರ್ಶನಕ್ಕೆ ಕರೆಯುವ ಅತಿಥಿಗಳು, ಅವರನ್ನು ಕೇಳುವ ಪ್ರಶ್ನೆಗಳು, ಪ್ರಶ್ನೆಗಳನ್ನು ಕೇಳುವ ಪರಿಯಲ್ಲಿಯೇ ನಮಗೆ ಸೂಕ್ಷ್ಮವಾಗಿ ಪತ್ರಕರ್ತರ ನಿಲುವು ಮತ್ತು ಒಲವು ಯಾವ ಕಡೆಗಿದೆಯೆಂದು ತಿಳಿಯುತ್ತದೆ. ಹಾಗೆ ನೋಡಿದರೆ ಯಾರೂ ತಟಸ್ಥರಲ್ಲಆದರೆ ಕಥೆಗಾರನ ಸವಾಲು ಇರುವುದೇ ಇದರಲ್ಲಿ ತನ್ನ ನಿಲುವು ಒಲವಿನ ಬಗ್ಗೆ ಸೂಚನೆ ನೀಡದೆಯೇ, ಆದರೂ ಆಸಕ್ತಿಕರವಾಗಿ ಕಥೆಯನ್ನು ಹೆಣೆದು, ಓದುಗರು ತಮ್ಮ ನಿಲುವನ್ನು ತಮ್ಮಲ್ಲೇ ತೆಗೆದುಕೊಳ್ಳುವಂತೆ ಮಾಡುವುದು ಸುಲಭದ ಮಾತಲ್ಲ ಸಾಮಿಯವರ ಕಥೆಗಳು ಈ ಕೆಲಸವನ್ನು ಮಾಡುತ್ತವೆ. ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲ್ಪನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ. ಘಟನೆಗಳನ್ನು ಜೋಡಿಸುವ ಕ್ರಮವೂ ಇದೆ. ಓದುಗನ ಮನಸ್ಸಿನಲ್ಲಿ ಒಂದು ಚಿತ್ರಣವುಂಟಾಗುವಂತೆ ಮಾಡುವ ಕಲೆಗಾರಿಕೆಯೂ ಇದೆ. ಹೀಗಾಗಿ ಸ್ವಾಮಿಯವರು ಕುತೂಹಲದ ಮತ್ತು ಸಮರ್ಥವಾದ ಕಥೆಗಾರರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಎಂ ಎಸ್ ಶ್ರೀರಾಮ್