ಬದುಕಿನ ವಿವಿಧ ಅನುಭವಗಳನ್ನು ಪ್ರತಿಫಲಿಸುವ ಇಲ್ಲಿನ ಹತ್ತು ಕತೆಗಳಲ್ಲಿ ಮನುಷ್ಯ ಸಂಬಂಧಗಳ ಶೋಧನೆಯೇ ಪ್ರಮುಖವಾಗಿದೆಯೆನ್ನಬಹುದು. ಕೆಲವು ಕತೆಗಳು ಹಗೆತನದ ಅಥವಾ ಕ್ರೌರ್ಯದ ಸನ್ನಿವೇಶಗಳಲ್ಲಿ ಬದುಕುತ್ತಿರುವವರ ಬಾಳಿನಲ್ಲಿ ಭಾವೋದ್ರೇಕದ, ಅಚ್ಚರಿಯ ಅಥವಾ ಭ್ರಮನಿರಸನದ ಕ್ಷಣಗಳನ್ನು ಪಡಿಮೂಡಿಸುತ್ತವೆ; ಧಾಟಿಯಲ್ಲಿ ಆಶ್ರಯದಲ್ಲಿ ವಿಭಿನ್ನವಾಗಿದ್ದರೂ ವಿಷಾದವು ಹೇಗೋ ಹಾಗೆ ಖಿನ್ನತೆಯೂ ತುಂಬಿರುವ ಮನುಷ್ಯ ಸ್ಥಿತಿಯನ್ನು ಸೂಕ್ಷ್ಮವಾಗಿಯೂ ಗಾಢವಾಗಿಯೂ ಅರಿತುಕೊಳ್ಳಲು ಪ್ರಯತ್ನಿಸುತ್ತವೆ. ಅರ್ಥಪೂರ್ಣ ವ್ಯಂಗ್ಯದ, ಕಣ್ಣಿಗೆ ಕಟ್ಟುವಂಥ, ನಾಟಕೀಯ ಗುಣವುಳ್ಳ ಪ್ರತಿಮೆಗಳ, ಬದಲಾಗುವ ಪಾತ್ರಗಳ ಹಾಗೂ ಸನ್ನಿವೇಶಗಳ ಒಂದು ಮೆರವಣಿಗೆಯೇ ಇಲ್ಲಿನ ಕತೆಗಳಲ್ಲಿದೆ. ಇಲ್ಲಿ ಸಣ್ಣಪುಟ್ಟ ಹಳ್ಳಿ, ಪಟ್ಟಣಗಳಲ್ಲಿ ವಾಸಮಾಡುತ್ತಿರುವ ಬಹುಮಂದಿ ತಮ್ಮ ದಾರುಣ ಸ್ಥಿತಿಯನ್ನು ಪ್ರಶ್ನಿಸದೆ. ಒಪ್ಪಿಕೊಂಡಿರುವವರು. ಬಹುಮಟ್ಟಿಗೆ ಎಲ್ಲರದೂ ಬಡತನದ ಜೀವನ.
ಪ್ರತ್ಯೇಕತೆ ಮತ್ತು ಒಬ್ಬೊಂಟಿತನ, ದುರ್ವಿಧಿ ಮತ್ತು ಅಸಹಾಯಕತೆ, ಇವು ಲಕ್ಷ್ಮಣರನ್ನು ಸಾಕಷ್ಟು ಕಾಡಿರುವ ವಸ್ತುಗಳು. ಇವುಗಳನ್ನು ಅನುಭವಿಸುವವರು ಪರಸ್ಪರರಿಂದ ಕುಟುಂಬದಿಂದ, ಸಮುದಾಯದಿಂದ ಬೇರ್ಪಟ್ಟ ಜನರು. ಹೀಗೆ ಬೇರ್ಪಡುವುದರಿಂದ ಉಂಟಾಗುವ ನೋವು, ಯಾತನೆಗಳು ನಮ್ಮ ಮನಸ್ಸನ್ನು ತಟ್ಟುವುದು ಸಹಜ. ಮನುಷ್ಯ ಸಂಬಂಧಗಳನ್ನು ಪರಿಶೀಲಿಸಿ ನೋಡುವ ಸೂಕ್ಷ್ಮಜ್ಞತೆ, ಕೆಲವೇ ಶಬ್ದಗಳಲ್ಲಿ ಸನ್ನಿವೇಶವೊಂದನ್ನು ಕಡೆದು ನಿಲ್ಲಿಸುವ ಚಿತ್ರಕ ಶಕ್ತಿ ಬದುಕಿನ ಹಲವು ಮಗ್ಗುಲುಗಳನ್ನು ಕಾಣಿಸುವ ಧ್ವನಿಪೂರ್ಣತೆ, ಭ್ರಾಮಕ ಅಂಶಗಳನ್ನೂ ನೈಜ ) ಅನುಭವವನ್ನಾಗಿ ಪರಿವರ್ತಿಸುವ ಪರಿಣತಿ, ಇವು ಲಕ್ಷ್ಮಣರ ಕತೆಗಳಲ್ಲಿ ಎದ್ದುಕಾಣುವ ಗುಣಗಳು.
ಎಸ್ ದಿವಾಕರ್