ಯಾವುದೇ ಬಗೆಯ ಪೋಷಾಕುಗಳಿಂದ ಮುಕ್ತವಾದ ಮಗುವಿನ ಸಹಜ ನಡಿಗೆಯಲ್ಲಿ ಪಾಲಕರಿಗೆ ತಾವು ಅಲಕ್ಷಿಸಿದ ಬದುಕಿನ ಚೆಲುವು-ಸತ್ಯಗಳು ಕಾಣಿಸುವಂತೆ, ತೋರಿಕೆಯ ಬೌದ್ದಿಕತೆ ಮತ್ತು ಪ್ರದರ್ಶನಪ್ರಿಯತೆಯ ಬ್ಯಾಗೇಜ್ಗಳಿಂದ ಮುಕ್ತವಾದ ಇಲ್ಲಿನ ಕಥೆಗಳು ಓದುವವರ ನೆನಪಿನ ಕೋಶಗಳಲ್ಲಿ ಕಂಪನಗಳನ್ನು ಎಬ್ಬಿಸಬಲ್ಲವು. ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲೂ ನಂಬಿಕೆಗಳನ್ನು ಬಿಟ್ಟು ಕೊಡದ ವ್ಯಕ್ತಿಗಳು, ಅವರ ಒದ್ದಾಟ, ಜೀವನಪ್ರೇಮ ಇವೆಲ್ಲ ಎಲ್ಲ ಕಾಲದ ಸಮಾಜವೂ ಹಂಬಲಿಸುವಂಥ ಜೀವದ್ರವ್ಯಗಳು. ಇಂಥ ಹಲವು ಬಿಂಬಗಳನ್ನು ಹಿಡಿದಿಡುವ ಹಂಬಲದ ಹರಳುಗಳ ಮೂಲಕ ಸಹೃದಯರು ತಮ್ಮ ಜೀವನದ ಅಖಂಡ ಚಿತ್ರವೊಂದನ್ನು ಕಾಣಿಸುವ ಕನ್ನಡಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಅಂತರಂಗದ ಖಾಸ್ಕಗಿ ಕೋಣೆಗಳಲ್ಲಿನ ಪಿಸುನುಡಿಗಳನ್ನು ದಾಟಿಸುವ ಮೂಲಕ, ಬಹಿರಂಗದ ಚೌಕಟ್ಟನ್ನು ಹೊಳೆಯಿಸುವ ಶಕ್ತಿ ಈ ಸಂಕಲನದ ಕಥೆಗಳಿದೆ. ನಿರಾಭರಣ ಸುಂದರಿಯಂತಿರುವ ಈ ಕಥೆಗಳ ಭಾಷೆ ಸರಳತೆಗೆ ಮೌಲ್ಯದ ಗುಣ ತಂದುಕೊಟ್ಟಿದೆ. ಕಥೆಯ ಪರಿಣಾಮದ ಬಗ್ಗೆ ನಂಬಿಕೆ ಹಾಗೂ ಕಥೆ ಕಟ್ಟುವ ಕಸುಬುದಾರಿಕೆಯ ಬಗ್ಗೆ ಪ್ರೀತಿ ಹೊಂದಿರುವ ಮನಸ್ಸು ರೂಪಿಸಿರುವ ಕನ್ನಡಿ ಹರಳು', ಸಮಕಾಲೀನ ಕನ್ನಡ ಕಥಾಲೋಕ ಗಮನಿಸಲೇಬೇಕಾದ ಕೃತಿ.
ರಘುನಾಥ ಚ ಹ