ಇನ್ನೂರಕ್ಕೂ ಹೆಚ್ಚು ಪಟಗಳನ್ನು ಮನೆ ಕೊಂಡವರು ನನಗೆ ತಂದು ಕೊಟ್ಟರು. ಒಂದೊಂದೇ ಪಟವನ್ನು ನೋಡಿದಾಗಲೂ ನುಗ್ಗಿ ಬರುವ ನೆನಪುಗಳು. ಆದರೆ ಅವುಗಳನ್ನು ರಕ್ಷಿಸುವದಾದರೂ ಹೇಗೆ? ನಮ್ಮ ಬದುಕನ್ನು ಅಪ್ಪಣೆ ಕೊಟ್ಟು ನಡೆಸಿದ ಈ ದೇವಾನುದೇವತೆಗಳು, ಹಿರಿಯರು ನನ್ನ ಕಡೆ ಅಸಹಾಯಕ ದೃಷ್ಟಿಯಿಂದ "ಹೇಗಾದರೂ ಕಾಪಾಡು” ಎಂದು ಬೇಡಿಕೊಳ್ಳಲಾರಂಭಿಸಿದರು. ಉಗ್ರನರಸಿಂಹನ ಉಗುರುಗಳು ಮೊಂಡಾಗಿದ್ದವು, ಲಕ್ಷ್ಮಿಯ ಕೈಯಿಂದ ಮುರಿಯುವ ಬಂಗಾರದ ನಾಣ್ಯಗಳು ಹೊಳಪು ಕಳೆದುಕೊಂಡಿದ್ದವು. ಸತ್ಯನಾರಾಯಣನ ಅಕ್ಕಪಕ್ಕದ ಬಾಳೆ ಎಲೆಗಳು ಬಾಡಿದ್ದವು, ಸೂರ್ಯದೇವರಿಗೆ ಗ್ರಹಣ ಹಿಡಿದಿತ್ತು.