ಎದೆಯ ಮಟ್ಟದಲ್ಲಿ ನೀರು ತಾಕುವ ತನಕ ಹೋಗಿದ್ದ ಮುಂದೆ ಹೆಜ್ಜೆ ಇಡಲು ಭಯ, ಏನು ಮಾಡಬೇಕೆಂದು ತೋಚದೆ ಕಂಗಾಲಾಗಿ ನಿಂತಿದ್ದ. ಆ ಹೊತ್ತಿನಲ್ಲಿ ಯಾರೋ ಹೆಣ್ಣುಮಗಳ ಧ್ವನಿಯೊಂದು ಕೇಳಿಸಿತು. "ಯಾರಪ್ಪಾ ಅದು... ಅಷ್ಟು ದೂರ ಹೋಗಬೇಡಿ... ತೆರೆ ಎಳಕೊಂಡು ಬಿಡ್ತದೆ...” ಎಂದು ಕೂಗಿ ಕೊಂಡಳು. ಆಕೆ ಪುಟ್ಟ ಮಗುವೊಂದನ್ನು ತನ್ನ ಕೊಂಕುಳಲ್ಲಿ ಎತ್ತಿಕೊಂಡಿರಬೇಕು.ಅದು ಯಾಕೋ ಜೋರಾಗಿ ಧ್ವನಿ ಎತ್ತಿ ಅಳತೊಡಗಿತು, ಬಹುಶಃ ಮೀನು ಹಿಡಿಯುವ ಗುಡಿಸಲಿನಿಂದ ಆಕೆ ಹೊರಬಂದಿರಬೇಕು ಎಂದು ಮೋಹನಸ್ವಾಮಿಗೆ ಅನ್ನಿಸಿತು. ಆದರೂ ಆ ಧ್ವನಿ ಅವನಿಗೆ ಆ ಹೊತ್ತಿನಲ್ಲಿ ಅಮೃತ ಸಿಂಚನದಂತೆ ಭಾಸವಾಯ್ತು. ತಕ್ಷಣ ಹಿಂದಕ್ಕೆ ತಿರುಗಿ ನೋಡಿದ. ದೂರದಲ್ಲಿ ಕೊಂಕಳಲ್ಲಿ ಮಗುವನ್ನು ಎತ್ತಿಕೊಂಡು ನಿಂತ ತಾಯಿ, ಅವಳ ಪಕ್ಕದಲ್ಲಿ ಎರಡು ಜಡೆ ಹಾಕಿಕೊಂಡ ಒಂದು ಪುಟ್ಟ ಹುಡುಗಿ ನಿಂತಿರುವ ನೆರಳಿನಂತಹ ಚಿತ್ರ ಕಣ್ಣಿಗೆ ಬಿತ್ತು. ಅವರ ಹಿಂದೆ ಒಂದು ಪುಟ್ಟ ಗುಡಿಸಲು, ಅದರ ಸುತ್ತ ಮುತ್ತ ಹತ್ತಾರು ತೆಂಗಿನ ಮರಗಳು, ಅವುಗಳ ಮೇಲೆ ಹೊಳೆಹೊಳೆಯುವ ಪೂರ್ಣ ಚಂದಿರ ಕಂಡು ಬಂದ. ಆ ದೃಶ್ಯ ಅವನಿಗೆ ಮಸುಕು ಮಸುಕಾಗಿ ತನ್ನಮ್ಮ ಮತ್ತು ಅಕ್ಕನನ್ನು ಜ್ಞಾಪಿಸಿತು, ಆಕೆಯ ಸೊಂಟದ ಮೇಲೆ ಅಳುತ್ತಾ ಕುಳಿತಿರುವ ಮಗು ತಾನೇ ಎನ್ನಿಸಿ ಬಿಟ್ಟಿತು. ತಾಯಿ ಮತ್ತು ಆಕೆಯ ಪುಟ್ಟ ಮಗಳಿಬ್ಬರೂ ಕೈಬೀಸಿ ಇವನನ್ನು ಈ ಕಡೆಗೆ ಬಾ ಎಂದು ಕರೆಯುತ್ತಿದ್ದರು. ಎದೆಯಲ್ಲಿ ಪ್ರೀತಿಯ ಸೆಲೆಯೊಂದು ಹರಿದು ಹೋಯ್ತು . ತಕ್ಷಣ ಹಿಂದಕ್ಕೆ ತಿರುಗಿದ. ದೊಡ್ಡ ಅಲೆಯೊಂದು ಅವನನ್ನು ಎತ್ತಿಕೊಂಡು ಬಂದು ದಡಕ್ಕೆ ಬಿಸಾಕಿಬಿಟ್ಟಿತು. ಚೇತರಿಸಿಕೊಂಡು ಎದ್ದು ಮೈಕೊಡವಿಕೊಂಡು ಹಾಸ್ಟೆಲ್ ಕಡೆಗೆ ನಡೆಯಲಾರಂಭಿಸಿದ. (ಸೈಕಲ್ಸವಾರಿ)