'ನಮ್ಮ ಹೊಲದಲ್ಲಿ ಉಳ್ಳಾಗಡ್ಡಿ (ಈರುಳ್ಳಿ) ಬೆಳೆಯುತ್ತೇವೆ. ಪ್ರತಿಯೊಂದು ಮರವೂ ಮಾವಿನ ಮರದಷ್ಟು ದೊಡ್ಡದಿದೆ. ಎಲೆಎಲೆಗೂ ಉಳ್ಳಾಗಡ್ಡೆಗಳು ಸುರಿದು ಬಿಟ್ಟಿರುತ್ತವೆ. ಒಂದೇ ಗಿಡದಲ್ಲಿ ಬಣ್ಣ ಬಣ್ಣದ ಉಳ್ಳಾಗಡ್ಡೆಗಳು ಬಿಡುತ್ತವೆ. ಬರೀ ಬಿಳಿ, ಕೆಂಪು ಮಾತ್ರವಲ್ಲ, ನೀಲಿ, ಹಳದಿ, ಹಸಿರು, ಕಪ್ಪು ಉಳ್ಳಾಗಡ್ಡೆಗಳೂ ನಮ್ಮ ಹೊಲದಲ್ಲಿ ಬೆಳೆಯುತ್ತವೆ. ಈ ಗಿಡಗಳ ನಡುವಿನ ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಮಲದ ಹೂಗಳನ್ನು ಬೆಳೆಸಿದ್ದೇವೆ. ಹೊಲದಲ್ಲಿ ಓಡಾಡುವಾಗ ನೆಲದ ಮೇಲೆ ಕಾಲು ಇಡುವ ಹಾಗೆಯೇ ಇಲ್ಲ, ಕಮಲದ ಹೂಗಳ ಮೇಲೆ ಕಾಲಿಟ್ಟುಕೊಂಡು ನಾವು ನಮ್ಮ ಹೊಲದಲ್ಲಿ ಓಡಾಡುತ್ತೇವೆ. ಆಗಾಗ ಲಕ್ಷ್ಮಿ, ಸರಸ್ವತಿ, ಬ್ರಹ್ಮ ಮುಂತಾದವರು ನಮ್ಮ ಹೊಲಕ್ಕೆ ಪುಷ್ಪಕ ವಿಮಾನದಲ್ಲಿ ಬಂದು ಕಮಲದ ಮೇಲೆ ಕುಳಿತುಕೊಂಡಿರುತ್ತಾರೆ. ವೀಣೆ ಬಾರಿಸೋದು, ಹಾಡು ಹೇಳೋದು, ಜಪ ಮಾಡೋದು ಏನಾದ್ರೂ ಮಾಡ್ತಾ ಇರ್ತಾರೆ ಲಕ್ಷ್ಮಿಯಂತೂ ಒಮ್ಮೊಮ್ಮೆ ಕೈ ಮೇಲಕ್ಕೆತ್ತಿ ಬಂಗಾರದ ನಾಣ್ಯಗಳನ್ನು ಸುರಿಸುತ್ತಿರುತ್ತಾಳೆ.