ಸಂಸ್ಕೃತ ಹಾಗೂ ಕನ್ನಡದಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದಿರುವ ಶ್ರೀನಿ.ಜಿ.ವಿಜಯಸಿಂಹಾಚಾರ್ಯರು, ಸಂಸ್ಕೃತದ ಪ್ರಾಚೀನ ಕಥಾಸಂಕಲನವಾದ ದಂಡಿಯ ದಶಕುಮಾರಚರಿತೆಯನ್ನು ನಡುಗನ್ನಡ ಶೈಲಿಯಲ್ಲಿ ಮಾಡಿದ್ದಾರೆ. ಈ ಕನ್ನಡಾನುವಾದವು ಅಪೂರ್ವವಾಗಿದೆ. ಲೇಖಕರು ಕನ್ನಡ ಭಾಷೆಯ ಸೊಬಗಿಗೆ ತಕ್ಕಂತೆ ಅನುವಾದಿಸಿರುವುದು ಅವರ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತ ಸಾಹಿತ್ಯದ ಪರಿಪೂರ್ಣ ಪಾಂಡಿತ್ಯವನ್ನು ತೋರಿಸುತ್ತಿದೆ. ಈ ಕಥೆಗಳ ಸ್ವಾರಸ್ಯವನ್ನು ಸರಿಯಾಗಿ ಕನ್ನಡವನ್ನು ತಿಳಿದವರು ಆಸ್ವಾದಿಸಬಹುದಾಗಿದೆ. ಮಾನವೀಯ ಸಂಬಂಧಗಳು, ಭಾವನೆಗಳು, ನೈತಿಕನೆಲೆಗಳು, ಆಧ್ಯಾತ್ಮಿಕ ವಿಷಯಗಳು ಇಲ್ಲಿ ತುಂಬಿವೆ. ಮಾಯಾ, ಮಂತ್ರ, ಮಾಟ ಮೊದಲಾದವು ಹಾಗೂ ಪ್ರೀತಿ ಪ್ರೇಮಗಳು ಓದುಗರಲ್ಲಿ ಕುತೂಹಲ ಮೂಡಿಸುತ್ತವೆ.
ದಶಕುಮಾರಚರಿತೆಯ ಕಥೆಗಳು ಮಾನವನ ಮನಸ್ಸಿನ ಹಲವು ಆಯಾಮಗಳನ್ನು ಬಿಚ್ಚಿ ತೋರಿಸುತ್ತವೆ. ಆದುದರಿಂದಲೇ ಎಂದೆಂದಿಗೂ ಪ್ರಸ್ತುತವಾಗುತ್ತವೆ. ಗುಣಾಡ್ಯನ ಬೃಹತ್ಕಥೆಯ ಆಧಾರದ ಮೇಲೆ ರಚಿತವಾಗಿರುವ ಈ ಕಥೆಗಳು ಎಲ್ಲ ವಿಧದ ಸ್ವಭಾವಗಳ ಜನರಿಗೂ ಮೆಚ್ಚಿಗೆಯಾಗುತ್ತವೆ. ಮಾನವನ ಸ್ವಭಾವವನ್ನನುಸರಿಸುವ ಅವನ ಭಾವಗಳೂ, ಕೆಲವೊಮ್ಮೆ ಇತರರ ಪ್ರಭಾವದಿಂದ ತಾತ್ಕಾಲಿಕವಾಗಿ ಬದಲಾಗುವ ಸ್ವಭಾವಗಳೂ ಅವುಗಳಿಂದುಂಟಾಗುವ ವಿಚಿತ್ರ ಘಟನೆಗಳೂ ಮಾನವನ ಕುತೂಹಲವನ್ನು ಕೆರಳಿಸಿ ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ.
ಸುಮಾರು ಒಂದು ಸಾವಿರದ ಐನೂರು ವರ್ಷಗಳ ಹಿಂದಿನ ಈ ಗ್ರಂಥವನ್ನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅನುವಾದ ಮಾಡಲಾಗಿದೆ. ಇಂತಹ ಅಪೂರ್ವ ಕಥೆಗಳು ಓದುಗರಿಗೆ ಉತ್ತಮವಾದ ಕಲ್ಪನಾಶಕ್ತಿಯನ್ನು ಬೆಳೆಸುತ್ತವೆ. ಮನೋರಂಜನೆಯನ್ನೂ ನೀಡುತ್ತವೆ. ಕೆಲವು ಕಥೆಗಳು ನಮ್ಮ ನೈತಿಕತೆಯನ್ನು ಹೆಚ್ಚಿಸಿದರೆ ಮತ್ತೆ ಕೆಲವು, ನೈತಿಕತೆಯನ್ನು ಕೊಂಡವರು ನಾಶವಾದ ಬಗೆಯನ್ನು ವಿವರಿಸಿ ನಮ್ಮನ್ನು ಎಚ್ಚರಿಸುತ್ತವೆ. ರಾಮಾಯಣದ ಅಧ್ಯಯನದಿಂದ, ಹೇಗೆ ಸಮಾಜದ ಜನರೆಲ್ಲರೂ 'ರಾಮನೇ ಮೊದಲಾದ ಉತ್ತಮ, ಧೀರನಾಯಕರಂತೆ ಬದುಕಬೇಕೇ ಹೊರತು ರಾವಣನೇ ಮೊದಲಾದ ದುಷ್ಟರಂತೆ ಅಲ್ಲ' ಎಂಬ ನೀತಿಯನ್ನು ಅರಿಯಬಹುದೋ ಹಾಗೆಯೇ ಈ ಕಥೆಗಳೂ ಕೂಡ ಧೀರೋದಾತ್ತನಾಯಕರ ಕಥೆಗಳಾಗಿವೆ. ಕೆಲವೊಂದು ಜಾರಚೋರರ ಉಪಕಥೆಗಳು ಮಧ್ಯದಲ್ಲಿ ನುಸುಳಿದ್ದರೂ ಅವರಂತೆ ನಾವಾಗಬಾರದು ಎಂಬ ನೀತಿಯನ್ನು ಸಾರುತ್ತಿವೆ. ಈ ಎಲ್ಲ ಕಥೆಗಳೂ ಪ್ರಸ್ತುತ ಸಿನೆಮಾರಂಗಕ್ಕೂ, ದೂರದರ್ಶನದ ಧಾರಾವಾಹಿಗಳಿಗೂ ಸೂಕ್ತವಾಗಿವೆ. ಈ ಮೂಲಕ ಜೀವನಾನುಭವದ ನಾನಾ ಮುಖಗಳನ್ನು ಜನರಿಗೆ ಮನದಟ್ಟು ಮಾಡಿಕೊಡಬಹುದಾಗಿದೆ.ಮಾನವ ಜೀವನದ ಉದ್ದೇಶದ ಬಗ್ಗೆ ಎಚ್ಚರಿಸಬಹುದಾಗಿದೆ. ಶ್ರೇಷ್ಠವಾದ ಮನೋರಂಜನೆಯ ಜೊತೆಗೆ ಸಮಾಜದಲ್ಲಿ ನೈತಿಕತೆಯನ್ನೂ ಸಾರಬಹುದಾಗಿದೆ. ಈ ಅನುವಾದವು ಎಲ್ಲ ಜನರನ್ನೂ ತಲುಪಿ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತಿದ್ದೇನೆ.
ಈ ಅನುವಾದವು ಕನ್ನಡಸಾಹಿತ್ಯಕ್ಕೆ ಒಂದು ಪ್ರಬುದ್ಧ ಕೊಡುಗೆ ಎಂದು ನಾನು ಭಾವಿಸಿದ್ದೇನೆ.
ಡಾ.ಎಸ್.ಎನ್.ಪ್ರಾಣೇಶ ಸಂಸ್ಕೃತಪ್ರಾಧ್ಯಾಪಕರು,
ಜೈನ್ ವಿಶ್ವವಿದ್ಯಾಲಯ, ಬೆಂಗಳೂರು.