ಕೀರ್ತನ ಸುಧಾ
ಶಾಶ್ವತವಾದ ಸುಖ ಸದಾ ನಮ್ಮದಾಗಬೇಕಾದರೆ, ಭಗವಂತನ ಸ್ಮರಣೆಯಿಂದ ಮಾತ್ರ ಸಾಧ್ಯ. ವ್ಯವಹಾರಿಕ ಜೀವನದಲ್ಲಿ ಮುಳುಗಿಹೋಗದ ಹಾಗೆ ಮಾನವನ ಜೀವನವು ಸುಖಮಯವೂ, ಸದ್ಗುಣಸಂಪದ್ಭರಿತವೂ, ಮೌಲ್ಯಯುತವೂ ಆಗಿರುವಂತೆ ಮಾಡಲು, ಅನೇಕ ಯತಿವರೇಣ್ಯರು, ಪೀಠಾಧಿಪತಿಗಳು, ಹರಿದಾಸರು, ಮಹಿಳೆಯರು, ಪರಂಪರಾನುಗತವಾಗಿ ರಚಿಸಿರುವ ಅನೇಕ ಕೀರ್ತನೆಗಳು, ರಚನೆಗಳು, ಉಗಾಭೋಗಗಳು, ಸುಳಾದಿಗಳು ಇಂದಿಗೂ ಜನಸಾಮಾನ್ಯರ ಬಾಯಲ್ಲಿ ರಾರಾಜಿಸುತ್ತಾ ಬಂದಿದೆ. ಈ ರಚನೆಗಳು ಕೇಳಲಷ್ಟೇ ಅಲ್ಲ ನೀತಿ, ತತ್ವಸಿದ್ದಾಂತ ಪ್ರಮೇಯ, ನಿಂದಾಸ್ತುತಿ, ಆಚಾರ, ಆನಂದ, ಅನುಸಂಧಾನ, ಉಪಾಸನಗಳಿಂದ ಕೂಡಿದೆ. ಇಂತಹ ಭಕ್ತಿಗೀತೆಗಳು ಅಥವಾ ಭಜನೆಗಳು ಕೇವಲ ಪ್ರದರ್ಶನವಲ್ಲ, ಇದು ಜೀವನ ದರ್ಶನ. ಭಜನೆಗಳು ಭಾರತೀಯರ ಜೀವನದ ಒಂದು ಭಾಗ ಮತ್ತು ನಮ್ಮ ಬದುಕನ್ನು ಸಹ್ಯವಾಗಿಸಿದೆ. ಸಂಗೀತ, ಸ್ವರಪ್ರಸ್ಥಾನಕ್ಕೆ ಹೆಚ್ಚು ಒತ್ತುಕೊಡದೆ, ಸರಳ ಆಡು ಭಾಷೆಯ ರಚಿತವಾಗಿದ್ದು ವೇದ ಪುರಾಣಗಳ ರಹಸ್ಯ ತತ್ವವನ್ನು ಜೀವನದ ಸಾರಾ-ಸಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಫಲಪ್ರದವಾಗಿವೆ. ಮಾನಸಿಕ ಸಮತೋಲನ, ಆಧ್ಯಾತ್ಮಿಕ ವಿಕಸನಕ್ಕೆ ದಿವ್ಯ ಔಷಧ.