ತಮಿಳುನಾಡಿನ ಅತಿ ಮುಖ್ಯವಾದ ಸಾಹಸ ಕ್ರೀಡೆ - ಜಲ್ಲಿಕಟ್ಟು. ಈ ಕ್ರೀಡೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ಸುಮಾರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಆ ಕಾಲದಿಂದ ಈಗಿನವರೆಗೂ ಮುಂದುವರೆದಿರುವ ಈ ಕ್ರೀಡೆ, ಕೇವಲ ಆಟವಲ್ಲ. ಇದೊಂದು ಜೀವನಶೈಲಿ. ಪ್ರಾಚೀನ ತಮಿಳು ಸಾಹಿತ್ಯವಾದ ‘ಕಲಿತ್ತೊಗೈ’ ನಲ್ಲಿ ಆಯರ್ಗಳು ಬಾಳುವ ಮುಲ್ಲೈ ನೆಲದಲ್ಲಿ ನಡೆಯುವ ಜಲ್ಲಿಕಟ್ಟಿನ ಕುರಿತು ಸಾಕಷ್ಟು ವರ್ಣಿಸಲಾಗಿವೆ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದಲ್’. ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಗಳ ಬಗ್ಗೆ ಚಿತ್ರಣಗಳಿವೆ.
ಚಿ.ಸು. ಚೆಲ್ಲಪ್ಪ ’ವಾಡಿವಾಸಲ್’ ಅನ್ನು ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೈಜ ಚಿತ್ರಣ - ಇವುಗಳಿಂದ ಅವರು ಎಂಥಾ ಶ್ರೇಷ್ಠ ಸಾಹಿತಿಯೆಂಬುದನ್ನು ತೋರಿಸುತ್ತದೆ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆಯೆಂದು ವಿಮರ್ಶಿಸುವ ಪ್ರಾಣಿದಯಾ ಗುಂಪಿನವರು, ಒಮ್ಮೆ ’ವಾಡಿವಾಸಲ್’ ಅನ್ನು ಓದಬೇಕು.
ಪೆರುಮಾಳ್ ಮುರುಗನ್