ದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ, ತನ್ನ ಹಾಡಿಯನ್ನು ಬಿಟ್ಟು ಶಾಲೆಗೆಂದು ನಗರಕ್ಕೆ ಹೋಗುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ ಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ ರೋಚಕವೂ ಮಾನವೀಯವೂ ವಿನೋದ ಪೂರ್ಣವೂ ಕರುಣಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ. ಕಾವ್ಯಮಯವಾಗಿದೆ.ಇದನ್ನು ಓದುವಾಗ ಕುವೆಂಪು ಕಾದಂಬರಿಗಳು ನೆನಪಾಗುತ್ತವೆ. ಆಫ್ರಿಕನ್ ಲೇಖಕರಾದ ಶೋಯಿಂಕಾ, ಅಚಿಬೆ, ಗೂಗಿ ಅವರ ಕೃತಿಗಳು ನೆನಪಾಗುತ್ತವೆ. ಇವೆಲ್ಲವೂ ದೇಶೀ ಸಮಾಜಗಳು ಯುರೋಪಿಯನ್ ಆಧುನಿಕತೆಯ ಜತೆ ಮುಖಾಮುಖಿ ಮಾಡುವಾಗ ಹುಟ್ಟಿದ ಸಮಸ್ತ ತಲ್ಲಣಗಳನ್ನು ಒಳಗೊಂಡಿವೆ. ಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.
-ರಹಮತ್ ತರೀಕೆರೆ