ಎಲಿಝಬೆತ್ ಯೇಟ್ಸ್ ಬರೆದ 'ಆಮೋಸ್ ಫಾರ್ಚೂನ್' ಎಂಬ ಕಾದಂಬರಿ ರೂಪದಲ್ಲಿರುವ ಜೀವನಚರಿತ್ರೆಯನ್ನು ಅಥವಾ ಜೀವನಚರಿತ್ರೆಯಂತಿರುವ ಕಥನವನ್ನು ಓದುವಾಗ 'ಚರಿತ್ರೆಯಲ್ಲಿ ಸಹಮಾನವರನ್ನು ಮಾನವರೇ ಪ್ರಾಣಿಯಂತೆ ಮಾರುವ ಮತ್ತು ಕೊಳ್ಳುವ ಅಮಾನುಷವಾದ ಕಾರ್ಯ ಹೇಗೆ ಸಾಧ್ಯವಾಯಿತು?' ಎಂಬ ವಿಷಾದಮಯ ಪ್ರಶ್ನೆ ಹುಟ್ಟುತ್ತದೆ. ಗುಲಾಮರ ಮಾರಾಟ ಅರಬರಲ್ಲಿಯೂ, ಗ್ರೀಕರಲ್ಲಿಯೂ ಇತ್ತು. ದಲಿತರಿಗೆ ಸಂಬಂಧಿಸಿದಂತೆ
ಭಾರತದಲ್ಲಿಯೂ ಬೇರೆ ತರಹ ಇತ್ತು. ವ್ಯಂಗ್ಯವೆಂದರೆ, ಪ್ರಜಾಪ್ರಭುತ್ವ, ವ್ಯಕ್ತಿ ಸ್ವಾತಂತ್ರ್ಯ, ಸೋದರತೆ, ವೈಚಾರಿಕತೆ, ಮಾನವತಾವಾದ ಮುಂತಾದ ಮೌಲ್ಯಗಳನ್ನು ಹುಟ್ಟಿಸಿ ಏಶಿಯಾ ಆಫ್ರಿಕಾ ಖಂಡದ `ಅನಾಗರಿಕ ಸಮಾಜಗಳಗೆ ಕೊಟ್ಟೆವೆಂದು ಹೇಳಿಕೊಳ್ಳುವ, ಈಗಲೂ ಹೀಗೆ ಡೆಮಾಕ್ರಸಿಯನ್ನು ರಫ್ತು ಮಾಡಲು ಹವಣಿಸುತ್ತಿರುವ, ಯೂರೋಪು ಹಾಗೂ ಅಮೆರಿಕದ ಬಿಳಯ ಜನಾಂಗಗಳು, ಸ್ವತಃ ಗುಲಾಮಗಿರಿಯ ಕರಾಳ ಚರಿತ್ರೆಯನ್ನು ತಮ್ಮ ಸೆರಗಿನಲ್ಲಿ ಕಟ್ಟಕೊಂಡಿರುವುದು. ಆದರೆ ಎಷ್ಟೇ ಹತ್ತಿಕ್ಕುವ ಕಠಿಣ ವಾಸ್ತವದಲ್ಲಿಯೂ ನಿರಾಶರಾಗದೆ ಸ್ವಾತಂತ್ರ್ಯಕ್ಕಾಗಿ ಸೆಣಸುವ ಛಲವೊಂದು ಮಾನವರಲ್ಲಿ ಅಡಗಿರುವುದು ಸೋಜಿಗ ಮತ್ತು ಸಂತಸ ಹುಟ್ಟಿಸುತ್ತದೆ. ಪ್ರಸ್ತುತ ಕೃತಿಯು ಇಂತಹ ಕರಾಳ ಗುಲಾಮಗಿರಿಯ ದಮನ ಮತ್ತು ಭರವಸೆ ಕಳೆದುಕೊಳ್ಳದೆ ಬಿಡುಗಡೆಗಾಗಿ ಮಾಡುವ ಅದಮ್ಯ ಚೈತನ್ಯಗಳ ಮುಖಾಮುಖಿಯನ್ನು ತಣ್ಣಗೆ ಮಾಡುತ್ತದೆ. ಜೀವನದುದ್ದಕ್ಕೂ ತನ್ನ ದುಡಿಮೆಯ ಹಣದಿಂದ ಕರಿಯರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡುವ ಈ ಕೃತಿಯ ನಾಯಕ ಆಮೋಸ್, ಮನುಕುಲ ಕಂಡ ಬಹಳ ದೊಡ್ಡ ಜೀವ. ಅಜ್ಞಾತವಾಗಿ ಬಾಳಹೋದ ಇಂತಹವರಿಂದಲೇ ಈ ಲೋಕದ ಚರಿತ್ರೆ ಮಾನವೀಯ ಮಿಡಿತ ಉಳಸಿಕೊಂಡಿದೆ. ಈ ಕೃತಿ ಓದಿದ ಬಳಕ ಒಂದೊಮ್ಮೆ ಅಮೆರಿಕಕ್ಕೆ ಹೋದರೆ ಅವನ ಸಮಾಧಿಗೆ ಹೋಗಿ ಗೌರವ ಸಲ್ಲಸಬೇಕು ಎಂಬ ಉತ್ಕಟ ತುಡಿತವುಂಟಾಗುತ್ತದೆ. ತೊಗಲ ಬಣ್ಣದ ಕಾರಣದಿಂದಲೇ ಅಪಮಾನಕ್ಕೆ ಅನ್ಯಾಯಕ್ಕೆ ಈಡಾದ ಆಫ್ರಿಕಾದ ರಾಜಕುವರ ಆಮೋಸ್, ಜಾನುವಾರುಗಳ ಚರ್ಮವನ್ನು ಹದಮಾಡಿ ಬಿಆಯರ ದೇಹ ಮುಚ್ಚಲು ಬಟ್ಟೆಯಾಗಿ ರೂಪಾಂತರ ಮಾಡಿಕೊಡುತ್ತಾನೆ; ಕತೆಗಾರನೂ ಹಾಡುಗಾರನೂ ಕನಸುಗಾರನೂ ಆದ ಆತನ ಕೈಯಲ್ಲಿ ತೊಗಲು ಹದಗೊಳಿಸುವ ಕಾಯಕವು ಒಂದು ಅಪೂರ್ವ ಕಲೆಯಾಗಿ ಮಾರ್ಪಡುತ್ತದೆ. ಕೃತಿಯ ಕೊನೆಯಲ್ಲಿ ಒಬ್ಬ ಬಿಳಯ, ಆಮೋಸ್ನಲ್ಲಿ ತನ್ನ ಮಗನು ತೊಗಲು ಹದಗೊಳಿಸುವ ಕಲೆ ಕಆಯಲು ಶಿಷ್ಯನಾಗಿ ಕಳಸಿಕೊಡುವ ಚಿತ್ರ ಬರುತ್ತದೆ. ಇವೆಲ್ಲ ಸಹಜ ಸರಳ ವಿವರಗಳು ರೂಪಕಗಳಾಗಿ ಕೂಡ ಕಾಣುವಂತೆ ಕೃತಿ ಜೀವಂತವಾಗಿದೆ.
ರಹಮತ್ ತರೀಕೆರೆ