[02/01, 09:10] ಸಾಹಿತ್ಯಲೋಕ ಪಬ್ಲಿಕೇಷನ್ಸ್: ಸ್ಕಂದ ಹೃಷಿಕೇಶದಲ್ಲಿ ಬಸ್ಸಿನಿಂದ ಇಳಿದಾಗ ಜೋರು ಮಳೆ. ಬಸ್ ನಿಲ್ದಾಣದಲ್ಲಿ ಪಾದಗಳು ಮುಳುಗುವಷ್ಟು ನೀರು ತುಂಬಿತ್ತು. ಸುತ್ತಲು ಏನಿದೆ ಎಂದು ನೋಡಲು ಕೂಡ ಬಿಡದೇ ಮಳೆಯು ಅವನ ಮುಖಕ್ಕೆ ಬಾರಿಸುತ್ತಿತ್ತು. ಆ ಪ್ರದೇಶದಲ್ಲಿ ಮಳೆ ಬಹಳ ಸಹಜವಾದ್ದರಿಂದ ಜನ ಅದಕ್ಕೆ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಲೇ ಇದ್ದರು. ಮಳೆಯ ಮಧ್ಯೆ ಮನುಷ್ಯರ ಆಕೃತಿ ಅಸ್ಪಷ್ಟವಾಗಿ ಅವನಿಗೆ ಕಂಡಿತು. ಅಲ್ಲೇ ನಡೆದು ಹೋಗುತ್ತಿದ್ದವನನ್ನು ಉತ್ತರಾಶ್ರಮ ಎಷ್ಟು ದೂರವಾಗುತ್ತೆ ಎಂದು ಕೇಳಿದ. ಆ ವ್ಯಕ್ತಿ ಎರಡು ಕಿಲೋಮೀಟರ್ ಎಂದ. ಚೆನ್ನಾಗಿ ನಡೆದು, ಪರ್ವತಗಳನ್ನು ಹತ್ತಿ-ಇಳಿದು ಅಭ್ಯಾಸವಾಗಿದ್ದ ಅವನಿಗೆ ಎರಡು ಕಿಲೋಮೀಟರ್ ನಡೆಯುವುದು ಕಷ್ಟವಾಗಿರಲಿಲ್ಲ. ಆದರೆ ಆದಷ್ಟು ಬೇಗ ಆಶ್ರಮ ನೋಡಬೇಕು ಎನ್ನುವ ಕುತೂಹಲದಿಂದ ಅವನಿಗೆ ನಡೆಯುವಷ್ಟು ತಾಳ್ಮೆಯಿರದೆ, ಆಟೋದಲ್ಲಿ ಹೋಗಲು ತೀರ್ಮಾನಿಸಿ, ಬಸ್ ನಿಲ್ದಾಣದಿಂದ ಹೊರಗೆ ಬಂದ.
[02/01, 09:11] ಸಾಹಿತ್ಯಲೋಕ ಪಬ್ಲಿಕೇಷನ್ಸ್: ಸ್ಕಂದ ಅತಿಥಿ ಗೃಹದಲ್ಲಿ ಸ್ನಾನ ಮಾಡಿ, ಕೊಡೆಯನ್ನು ಹಿಡಿದುಕೊಂಡು ಶ್ರೀಚಕ್ರಯಂತ್ರ ಮಂದಿರದ ಕಡೆ ಹೆಜ್ಜೆ ಹಾಕಿದ. ಮಂದಿರದ ಕಡೆ ಹೆಜ್ಜೆ ಹಾಕುವಾಗ ಅವನ ಮನಸ್ಸು ರೋಮಾಂಚನಗೊಳ್ಳುತ್ತಿತ್ತು. ಎಷ್ಟು ಎತ್ತರವಿದೆ ಈ ಶ್ರೀಚಕ್ರಯಂತ್ರ. ನಮ್ಮ ಮನೆಯಲ್ಲಿರುವುದು ಬಹಳ ಪುಟ್ಟದ್ದು. ನಮ್ಮ ಮನೆಗೆ ಶ್ರೀಚಕ್ರಯಂತ್ರ ಬರುತ್ತದೆ, ನಾನು ಶ್ರೀಚಕ್ರಯಂತ್ರ ಪೂಜಿಸುತ್ತೀನಿ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ಶ್ರೀಚಕ್ರಯಂತ್ರ ಎನ್ನುವ ಪದ ನನ್ನ ಕಿವಿಗೆ ಬಿದ್ದಿತ್ತು. ಏಳನೇ ಕ್ಲಾಸಿನಲ್ಲಿ ಸಂನ್ಯಾಸಿಯೊಬ್ಬರು ಶ್ರೀಚಕ್ರ ಪೂಜೆ ಮಾಡುವುದು ನೋಡಿದ ಮೇಲೆ ನನ್ನೊಳಗೆ ಏನೋ ಆಗಲು ಶುರುವಾಯಿತಾದರೂ, ನಾನು ಶ್ರೀಚಕ್ರಯಂತ್ರದ ಬಗ್ಗೆ ತುಂಬಾ ಯೋಚಿಸಿರಲಿಲ್ಲ. ಶ್ಯಾಮ ಪ್ರಸಾದರ ಮನೆಗೆ ಸಂಗೀತ ಕಲಿಯಲು ಹೋಗಲು ಶುರುಮಾಡಿದ ಮೇಲೆ; ಅವರ ಕಟ್ಟಡದಲ್ಲೇ ಬಾಡಿಗೆಗೆ ಇದ್ದ ಜಗನ್ನಾಥ ಶಾಸ್ತ್ರಿಗಳು ಆಗಾಗ ಶ್ಯಾಮಪ್ರಸಾದರ ಮನೆ ಬರುತ್ತಿದ್ದರು. ಅವರು ಶ್ರೀಚಕ್ರ ಉಪಾಸನೆಯ ಬಗ್ಗೆ ಶ್ಯಾಮ ಪ್ರಸಾದರ ಜೊತೆ ಮಾತನಾಡುತ್ತಿದ್ದರು. ಆಗಲೇ ನಾನು ಅದರ ಬಗ್ಗೆ ಸರಿಯಾಗಿ ಗಮನ ಕೊಟ್ಟಿದ್ದು. ಶ್ರೀಚಕ್ರಯಂತ್ರ; ರಾಜಯಂತ್ರವೆಂದು, ಜಗನ್ಮಾತೆ ಲಲಿತಾ ಪರಮೇಶ್ವರಿ ವಾಸಿಸುವ ಜಾಗವೆಂದು, ಆ ಯಂತ್ರವನ್ನು ಉಪಾಸನೆ ಮಾಡಲು ಎಷ್ಟೋ ಜನ್ಮಗಳ ಪುಣ್ಯವಿರಬೇಕೆಂದು, ಅದಕ್ಕೆ ಮಂತ್ರೋಪದೇಶವಾಗಿರಬೇಕೆಂದು ಹೇಳಿದರು. ನಾನು ಕುತೂಹಲದಿಂದ ಯಾವ ಮಂತ್ರವೆಂದು ಕೇಳಿದೆ. ಗಾಯತ್ರಿ ಮಂತ್ರದ ನಂತರ ಮಹಾಗಣಪತಿ ಮಂತ್ರ, ಮೇಧಾ ದಕ್ಷಿಣಾಮೂರ್ತಿ ಮಂತ್ರ, ಬಾಲತ್ರಿಪುರಸುಂದರಿ, ಪಂಚದಶೀ ಈ ಮಂತ್ರಗಳು ಉಪದೇಶವಾಗಿರಬೇಕು, ಪಂಚದಶೀ ನಂತರ ಷೋಡಶೀ, ಮಹಾಷೋಡಶೀ ಮಂತ್ರಗಳೂ ಇವೆ; ಎಂದು ಹೇಳಿದರು. ಗಾಯತ್ರಿ ಬಿಟ್ಟು ಇನ್ಯಾವ ಮಂತ್ರವೂ ನನಗೆ ಗೊತ್ತಿರಲಿಲ್ಲ. ಶಾಸ್ತ್ರಿಗಳು ಇವೆಲ್ಲಾ ಹೇಳಿದಾಗ ಆಶ್ಚರ್ಯವಾಯಿತು. ನಿಮಗೆ ಎಲ್ಲಾ ಮಂತ್ರಗಳು ಆಗಿವೆಯೇ? ಎಂದು ಕುತೂಹಲದಿಂದ ಕೇಳಿದೆ. ‘ಇಲ್ಲ, ಬಾಲಮಂತ್ರದ ತನಕ ಆಗಿದೆ. ಬಾಲಮಂತ್ರ ನನಗೆ ಹತ್ತೊಂಬತ್ತು ವರ್ಷವಿದ್ದಾಗಲೇ ಆಯ್ತು. ಈಗ ಎಪ್ಪತ್ತಾರು ವರ್ಷ. ಇನ್ನೂ ಪಂಚದಶೀ ಆಗಲಿ ಅಂತ ಕಾಯ್ತಿದ್ದೀನಿ. ನನಗೆ ಉಪದೇಶ ಕೊಟ್ಟೋರು, “ಪರವಾಗಿಲ್ಲ ಬಾಲ ಆಗಿದ್ಯಾಲ್ಲ, ಶ್ರೀಚಕ್ರ ಪೂಜೆ ಮಾಡು” ಅಂದ್ರು. ಅದಕ್ಕೆ ಮಾಡ್ತೀದೀನಿ’ ಎಂದರು. ಆ ನಂತರ ಅವಕಾಶ ಸಿಕ್ಕಾಗಲ್ಲೆಲ್ಲಾ ಶಾಸ್ತ್ರಿಗಳಿಂದ ಶ್ರೀಚಕ್ರಯಂತ್ರದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದೆ.