ಸಾಹಿತ್ಯ ಲೋಕ ಪ್ರಕಾಶನವು ಈ ಕ್ರಿಸ್ಮಸ್ ಸಂದರ್ಭದಲ್ಲಿ ಖಲೀಲ್ ಗಿಬ್ರಾನ್ ನ ಮಾನವ ಪುತ್ರ ಯೇಸು (Kahlil Gibran’s ‘Jesus the Son of Man: His words and His deeds as told and recorded by those who knew Him’) ಪುಸ್ತಕವನ್ನು ಪ್ರಕಟಿಸುತ್ತಿದೆ. ಎಪ್ಪತ್ತೊಂಬತ್ತು ಅಧ್ಯಾಯಗಳಿಂದ ಕೂಡಿದ ಈ ಕೃತಿಯಲ್ಲಿ ನಮಗೆ ಯೇಸುವಿನ ಚಾರಿತ್ರ್ಯದ ನಾನಾ ಮುಖಗಳ ಪರಿಚಯವಾಗುತ್ತದೆ. ಬೈಬಲ್ಲಿನಲ್ಲಿ ನಾಲ್ವರು ಇವಾಂಜಲಿಸ್ಟ್ಗಳು (ಜಾನ್, ಮ್ಯಾಥ್ಯೂ, ಮಾರ್ಕ್, ಲ್ಯೂಕ್) ಯೇಸುವಿನ ಕಥೆ ಬರೆದಿದ್ದಾರೆ. ಈ ಕೃತಿಯಲ್ಲಾದರೂ ಎಪ್ಪತ್ತೊಂಬತ್ತು ’ಇವಾಂಜಲಿಸ್ಟ್ಗಳು’ ಯೇಸುವಿನ ಕಥೆ ನಿರೂಪಿಸುತ್ತಾರೆ. ಜೆರುಸಲೇಮ್ ನಗರದ ಬೀದಿ ಬದಿಯ ಚಮ್ಮಾರ, ಯೇಸುವಿಗೆ ಊಟ ಬಡಿಸಿದ ಹೋಟೆಲ್ ಮಾಲೀಕ, ಹೆಸರಿರದ, ಗುರುತಿರದ ದಾರಿಹೋಕರು, ತುರುಗಾಹಿಗಳಿಂದ ಹಿಡಿದು ಯೇಸುವಿನ ತಾಯಿ (ಮೇರಿ), ಅಜ್ಜಿ (ಅನ್ನಾ), ಅವನ ಒಡಹುಟ್ಟಿದವರು, ಅವನ ಮಿತ್ರರು, ಶತ್ರುಗಳು, ಅವನನ್ನು ಹತ್ತಿರದಿಂದ ಕಂಡಿದ್ದ ಸೂಳೆಯರು, ಗುಲಾಮರು, ಸೈನಿಕರು, ಅವನ ಕೊಲೆಗೆ ಹುನ್ನಾರ ಮಾಡಿದವರು.. ಹೀಗೆ ಒಬ್ಬೊಬ್ಬರೂ ತಮ್ಮ ಸ್ಮೃತಿಕೋಶದಲ್ಲಿ ಜತನದಿಂದ ಕಾಪಾಡಿಕೊಂಡಿದ್ದ ಅವನ ಮಾತು, ಕತೆ, ನಡೆ ನುಡಿಗಳನ್ನು ಸ್ವಗತದ ಶೈಲಿಯಲ್ಲಿ ನುಡಿಯುತ್ತ ತಮ್ಮ ನೆನಪಿನ ಜೋಳಿಗೆಯನ್ನು ಓದುಗನೆದುರು ತೆರೆದಿಡುತ್ತಾರೆ. ಇದರಲ್ಲಿನ ಬಹುತೇಕ ಪಾತ್ರಗಳು (ಹಾಗೆಯೇ ಬಹುತೇಕ ವಾಕ್ಯಗಳು) ಬೈಬಲ್ನಲ್ಲೂ ಬರುತ್ತವೆ. ಆದರೆ ಅವು ಬೈಬಲ್ನಲ್ಲಿ ಯೇಸುವಿನ ಬಗ್ಗೆ ಏನನ್ನೂ ನುಡಿದಿಲ್ಲ. ದಾರ್ಶನಿಕ ಪ್ರತಿಭೆಯ ಕವಿ ಖಲೀಲ್ ಗಿಬ್ರಾನ್ ಅಂತಹ ಪಾತ್ರಗಳಿಗೆ ಈ ಕೃತಿಯಲ್ಲಿ ಧ್ವನಿ ನೀಡಿದ್ದಾನೆ. ಅಲ್ಲಿ ಆ ಪಾತ್ರಗಳು ನುಡಿಯದೇ ಹೋದ ಮಾತುಗಳನ್ನು ಇಲ್ಲಿ ನುಡಿಸಿದ್ದಾನೆ. ಖ್ಯಾತ ಅನುವಾದಕ ಡಾ. ಟಿ. ಎನ್. ವಾಸುದೇವ ಮೂರ್ತಿ ಅವರು ಇದನ್ನು ಅಚ್ಚುಕಟ್ಟಾಗಿ ಕನ್ನಡಿಸಿದ್ದಾರೆ. ಈ ಎಪ್ಪತ್ತೊಂಬತ್ತು ಪಾತ್ರಗಳು ಯೇಸುವಿನೊಂದಿಗೆ ಹೊಂದಿದ್ದ ಸಂಬಂಧ, ಹಿನ್ನೆಲೆ ಮುಂತಾದವು ಕನ್ನಡ ಓದುಗನಿಗೆ ತಿಳಿದಲ್ಲಿ ಓದುಗನಿಗೆ ಈ ಕೃತಿ ಇನ್ನೂ ಆಪ್ತವಾಗುತ್ತದೆ, ಆಸ್ವಾದನೀಯವೆನಿಸುತ್ತದೆ ಎಂಬ ಉದ್ದೇಶದಿಂದ ಇದರ ಪ್ರತಿ ಅಧ್ಯಾಯದ ಪ್ರಾರಂಭದಲ್ಲೂ ಒಂದು ಕಿರು ಟಿಪ್ಪಣಿ ನೀಡಲಾಗಿದೆ. ಹಾಗೆಯೇ ಅಲ್ಲಲ್ಲಿ ಉಲ್ಲೇಖವಾಗುವ ಬೈಬಲ್ಲಿನ ಹೆಸರುಗಳಿಗೆ, ಸ್ಥಳನಾಮಗಳಿಗೆ ಅಡಿಟಿಪ್ಪಣಿಗಳನ್ನೂ ಒದಗಿಸಲಾಗಿದೆ. ಪುಸ್ತಕವನ್ನು ಆಕರ್ಷಕವಾಗಿಸಲೆಂದು ಪ್ರತಿ ಅಧ್ಯಾಯದ ಸಾರವನ್ನು ಹಿಡಿದಿಡಬಲ್ಲ ಸೂಕ್ತವಾದ ಒಂದು ಚಿತ್ರವನ್ನು ಪ್ರತಿ ಅಧ್ಯಾಯದ ಮೊದಲಲ್ಲಿ ನೀಡಲಾಗಿದೆ.