ಸಾವು ವಿನಾಶ ಅಲ್ಲ.ಒಬ್ಬ ಮನುಷ್ಯನ ಅರ್ಹತೆಗೆ ಅನುಸಾರವಾಗಿ ಸುಖ ಅಥವಾ ದುಃಖವನ್ನು ಅನುಭವಿಸೋದಕ್ಕೋಸ್ಕರ ಇನ್ನೊಂದು ಕಡೆ ಆ ಬದುಕು ಮುಂದುವರೆಯುತ್ತೆ ಅನ್ನುವಂತದ್ದು. ಮರಣ ಹೊಂದಿದ ವ್ಯಕ್ತಿ ಈ ಭೂಮಿಯಲ್ಲಿ ಮತ್ತೆ ಹುಟ್ಟಿ ಬರ್ತಾನೆ, ಹುಟ್ಟು ಆರಂಭವೂ ಅಲ್ಲ, ಸಾವು ಅಂತ್ಯವೂ ಅಲ್ಲ ಅಂತ ನಮ್ಮ ವೇದಾಂತವೂ ಇತರ ಜಾಗತಿಕ ಧರ್ಮಗಳೂ ನಂಬುತ್ತವೆ. ನಮ್ಮ ಕರ್ಮ ಸಿದ್ಧಾಂತವನ್ನು ಭಾರತದ ಇತರ ಧರ್ಮಗಳಾದ ಬೌದ್ಧ ಜೈನ ಧರ್ಮಗಳೂ ಒಪ್ಪಿಕೊಳ್ತವೆ. ಹಲವು ಜಾಗತಿಕ ಧರ್ಮಗಳಲ್ಲಿ ಮುಖ್ಯವಾಹಿನಿಯಲ್ಲಿ ಅಲ್ಲದೇಹೋದರೂ ಒಂದು ಪಂಥ ಒಂದು ವರ್ಗದ ಜನ ಇದನ್ನು ನಂಬಿಕೊಂಡಿರುವುದನ್ನು ನಾವು ಕಾಣಬಹುದು. ಈ ಪುನರ್ಜನ್ಮದ ಪರಿಕಲ್ಪನೆ ಏನಿದೆ ಇದು ಬಹಳ ಕುತೂಹಲಕಾರಿಯಾದಂತದ್ದು. ವೈಜ್ಞಾನಿಕವಾಗಿ ಈ ಕುರಿತು ಇನ್ನೂ ಸಂಶೋಧನೆಗಳು, ಚರ್ಚೆಗಳೂ ನಡೀತಿದ್ದಾವೆ. ಕನ್ನಡದ ಹೆಸರಾಂತ ಕಾದಂಬರಿಗಳಾದಂತ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಹಾಗೂ ಡಾ.ಎಸ್.ಎಲ್.ಬೈರಪ್ಪನವರ ನಾಯಿನೆರಳು ಕಾದಂಬರಿಗಳನ್ನ ನಾನು ಓದಿದ್ದೇನೆ, ಪ್ರಭಾವಿತಳಾಗಿದ್ದೇನೆ. ಇವೆರೆಡೂ ಕಾದಂಬರಿಗಳು ಪುನರ್ಜನ್ಮದ ಕುರಿತಾಗಿ ಚರ್ಚಿಸ್ತವೆ. ಅದರಲ್ಲೂ ನಾಯಿ ನೆರಳು ಕಾದಂಬರಿಯಂತೂ ಪೂರ್ಣಪ್ರಮಾಣದಲ್ಲಿ ಪುನರ್ಜನ್ಮದ ವಸ್ತುವನ್ನೇ ಉಳ್ಳಂತದ್ದು. ನನಗೂ ಕೂಡಾ ಇದನ್ನು ಓದಿದ ಮೆಲೆ ಪುನರ್ಜನ್ಮದ ವಸ್ತುವನ್ನು ಇಟ್ಟುಕೊಂಡು ಕಾದಂಬರಿ ರಚಿಸಬೇಕು ಅಂತ ಆಸೆ ಬಹಳ ದಿನಗಳಿಂದ ಇತ್ತು. ಅದು ಈಗ ಗತ ಅನ್ನುವ ಕಾದಂಬರಿಯ ಹೆಸರಿನಲ್ಲಿ ಸಾಕಾರಗೊಂಡಿದೆ. ನಾನು ಡಾ.ಎಸ್.ಎಲ್.ಭೈರಪ್ಪನವರ ಕಟ್ಟಾಭಿಮಾನಿ. ಅವರು ನನ್ನ ನೆಚ್ಚಿನ ಕಾದಂಬರಿಕಾರರು. ಅವರ ಎಲ್ಲಾ ಕಾದಂಬರಿಯನ್ನ ನಾನು ಓದಿದೀನಿ. ಅವರ ತಂತ್ರ, ಭಾಷೆ, ಶೈಲಿ ನಿರೂಪಣಾ ವಿಧಾನಗಳು ಮುಂತಾದವನ್ನು ಗ್ರಹಿಸೋದಕ್ಕೆ ಪ್ರಯತ್ನ ಪಟ್ಟಿದ್ದೇನೆ. ಹಾಗೇ ಅದನ್ನ ನನ್ನ ಕೃತಿಗಳಲ್ಲಿ ತರೋದಕ್ಕೆ, ರೂಢಿಸಿಕೊಳ್ಳೋಕೆ ಪ್ರಯತ್ನಿಸಿದ್ದೀನಿ. ಇದನ್ನ ತಾವು ನನ್ನ ಚೊಚ್ಚಲ ಕಾದಂಬರಿ ಆವರ್ತದಲ್ಲಿ ಕಾಣಬಹುದು. ಹಿರಿಯ ಲೇಖಕರಾದ ಎಸ್.ದಿವಾಕರ್ ಅವರು ನನ್ನ ಆವರ್ತ ಕಾದಂಬರಿಯನ್ನು ಭೈರಪ್ಪನವರ ಸಾರ್ಥಕ್ಕೆ ಸಮೀಕರಿಸಿದ್ದಾರೆ ಎನ್ನೋದನ್ನು ಹೆಮ್ಮಯಿಂದಲೂ ಸಂಕೋಚದಿಂದಲೂ ಹೇಳಲು ಬಯಸುತ್ತೇನೆ. ಮತ್ತು ಈ ಗತ ಕಾದಂಬರಿಯನ್ನು ನಾನು ರೋಚಕತೆ ತರುವ ದೃಷ್ಟಿಯಿಂದ ಐತಿಹಾಸಿಕ ಥ್ರಿಲ್ಲರ್ ಗಳನ್ನು ಬರೆಯುವಂತ ಕೆ.ಎಸ್. ಗಣೇಶಯ್ಯನವರ ತಂತ್ರವನ್ನು ಸ್ವೀಕರಿಸಿದ್ದೇನೆ. ಭೈರಪ್ಪನವರು ನನ್ನ ಆವರ್ತ ಕೃತಿಯನ್ನು ಸಂಪೂರ್ಣವಾಗಿ ಓದಿ ಮೆಚ್ಚಿ ಆಶೀರ್ವದಿಸಿದ್ದಾರೆ. ಮರುಮುದ್ರಣದ ಸಂರ್ಭದಲ್ಲಿ ಅವರು ಸಾಕಷ್ಟು ತಿದ್ದುಪಡಿಗಳನ್ನ ಕೊಟ್ಟು ಉಪಕರಿಸಿದ್ದಾರೆ. ಅಂತ ಮಹನೀಯರು ಇವತ್ತು ನನ್ನ ಗತ ಕಾದಂಬರಿಯನ್ನು ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ ಅಂದ್ರೆ ಅಂತಹ ಸುಕೃತ ನನ್ನದು. ಇವತ್ತಿನ ದಿನ ನನಗೆ ನನ್ನ ಸಾಹಿತ್ಯಿಕ ಬದುಕಿನಲ್ಲಿಯೇ ಒಂದು ಮಹತ್ವವಾದ ದಿನ. ನಾನು ಭೈರಪ್ಪಾವರಿಗೆ ಕೃತಜ್ಞಳಾಗಿದ್ದೇನೆ. (Postal charges extra)