ಅಣ್ಣನ ನೆನಪು ಕೃತಿ ಒಂದರ್ಥದಲ್ಲಿ ತೇಜಸ್ವಿಯವರು ಪುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಅಥವಾ ಅವರ ಜೀವನದ ಹಲವು ಮಹತ್ವದ ಅಧ್ಯಾಯಗಳು, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದು ಹೇಳಬಹುದು. ಕುವೆಂಪು ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಂಸ್ಕೃತಿ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿವೆ. ಆದರೆ ಇದೆಲ್ಲವನ್ನು ಮರೆತು ನಾವು ಓದಿದರೆ ಇದೊಂದು ಅತಿ ಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ಮತ್ತು ಅಸಾಧಾರಣ ದಾಖಲೆ.