ಒಂದು ರಾತ್ರಿ ನಮ್ಮೂರಿನ ನೇತ್ರಾವತಿ ಹೊಳಿಯ ದಂಡೆಯಲ್ಲಿ ಕೂತಿದ್ದೆ, ಮಾತಾಡುವುದಕ್ಕೆ ಗೆಳೆಯ ಗೋಪಿ ಇದ್ದ. ಆಗಷ್ಟೇ ಮಳೆಗಾಲ ಮುಗಿದಿತ್ತು. ನೇತ್ರಾವತಿ ಬಸವಳಿದು ಹರಿಯುತ್ತಿದ್ದಳು. ಇಬ್ಬರೂ ಯಾವುದೋ ಲೋಕದ ಕತೆಗಳನ್ನು ನಮ್ಮೆದುರು ಗುಡ್ಡೆ ಹಾಕಿಕೊಂಡು ಚಿರಂತನವಾದ ಮಾಯೆಯನ್ನು ಆವಾಹಿಸಿಕೊಳ್ಳಲಿಕ್ಕೆ ಹೆಣಗಾಡುತ್ತಿದ್ದೆವು. ಗೋಪಿ ಆಡು ಅಂತ ಬಲಕ್ಕೆ ತೋರಿಸಿದ. ನೇತ್ರಾವತಿ ನದಿ ಬಂಗಾರದ ಬಣ್ಣದ ನೀರನ್ನು ಮೈ ತುಂಬಿಕೊಂಡು ಭೋರ್ಗರೆದು ಭಾವಿಸಿ ಬರುತ್ತಿತ್ತು. ಅದರ ಅಕ್ಕಪಕ್ಕ ಇದ್ದ ಮನೆಗಳು, ಮರಗಳು ಆ ಪ್ರವಾಹದಲ್ಲಿ ಕೊಚ್ಚಿಕೊಂಡು ಬರುತ್ತಿದ್ದವು. ನದಿಯ ಸೆಳವಿಗೆ ಸಿಕ್ಕ ತಕ್ಷಣ ನಶ್ವರವಾದ ಆ ಗಿಡಮರಗಳಿಗೆ ನೇತ್ರಾವತಿಯ ಬಣ್ಣವೂರೂಪವೂ ಪ್ರಾಪ್ತವಾಗುತ್ತಿತ್ತು. ಆಸೆಳವಿನಲ್ಲಿ ನಾವು ಕೂಡ ಕೊಚ್ಚಿಕೊಂಡು ಹೋಗುತ್ತೇವೆ ಅಂತ ಗೊತ್ತಿದ್ದರೂ ಕುಳಿತಲ್ಲಿಂದ ಎಳದೇಹಾಗೇ ಕೂತಿದ್ದೆವು. ಇದ್ದಕ್ಕಿದ್ದಂತೆ ದೂರದಲ್ಲಿ ದೇವಸ್ಥಾನದ ಗಂಟೆ ಬಾರಿಸಿತು. ನಮ್ಮನ್ನು ಸೆಳೆದುಕೊಂಡು ಹೋಗಬೇಕಾದ ನದಿ ಶಾಂತವಾಯಿತು. ಅದರ ಬಂಗಾರದ ಬಣ್ಣ ಅಳಿದು ಅದು ಕಲ್ಲುಬಂಡೆಗಳನ್ನು ಬಳಸಿಕೊಂಡು ಹರಿಯುವ ನಿತ್ಯದತೊರೆಯಾಗಿಬಿಟ್ಟಿತು. ಆವತ್ತು ದೇವಸ್ಥಾನದ ಗಂಟೆ ಮೊಳಗದೇ ಹೋಗಿದ್ದರೆ ಏನಾಗುತ್ತಿತ್ತು?