"ಸಾವಿರದ ಸತ್ಯ". ಸಾವಿರದ ಸತ್ಯ ಸಂದೇಶಗಳು ಈಗಾಗಲೇ ನಿತ್ಯ ತಮ್ಮನ್ನು ತಲುಪುತ್ತಿವೆ. ಪ್ರಾರಂಭದಲ್ಲಿ ಹಾಗೆ ಸುಮ್ಮನೆ ಬರೆಯಲು ಪ್ರಾರಂಭಿಸಿದ ಹೆಚ್ಚು ಅರ್ಥ ಕೊಡುವಂತ ಎರಡು ಮೂರು ಸಾಲುಗಳ ಸಂದೇಶ ಈಗ ಒಂದು ಪುಸ್ತಕದ ರೂಪದಲ್ಲಿ ಹೊರಬರುತ್ತಿದೆ. ಇದರಲ್ಲಿರುವ ಸಂದೇಶಗಳು ಅನೇಕರಿಗೆ ಅನೇಕ ರೂಪದಲ್ಲಿ ಪ್ರೇರಣೆಯಾಗಿವೆ. ಒಂದು ದಿನ ಬರೆಯುವುದು ನಿಲ್ಲಿಸಿದರು.. ನೂರಾರು ಕರೆಗಳು ಬರುತ್ತವೆ ದಯವಿಟ್ಟು ಬರೆಯುವುದನ್ನು ನಿಲ್ಲಿಸಬೇಡಿ ಎಂದು. ಅಷ್ಟರಮಟ್ಟಿಗೆ ಹಲವರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ ಈ ಸಂದೇಶಗಳು. ಒಂದು ದಿನ ಒಬ್ಬ ವ್ಯಕ್ತಿ ನನಗೆ ದೂರವಾಣಿ ಕರೆ ಮಾಡಿ ಹೇಳುತ್ತಾರೆ ಇಂದಿನ ನಿಮ್ಮ "ಸಾವಿರದ ಸತ್ಯ" ಸಂದೇಶದಿಂದ ನನ್ನ ಜೀವನದ ದಿಕ್ಕು ಬದಲಾಗಿದೆ. ಜೀವನದಲ್ಲಿ ಬಹಳ ಪ್ರಿಯವಾಗಿದ್ದನ್ನು ಕಳೆದುಕೊಂಡಿದ್ದ ನಾನು ಇನ್ನು ಬದುಕಿರುವುದು ಬೇಡ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಯೋಚಿಸುತ್ತಿರುವಾಗಲೇ ನಿಮ್ಮ ಇಂದಿನ ಸಂದೇಶ "ಸಾವು ತರುವಂತ ನೆನಪುಗಳಿದ್ದರೆ ಮೊದಲು ಆ ನೆನಪುಗಳನ್ನು ಸಾಯಿಸಿ. ನಂತರ ಸಾವು ಹತ್ತಿರ ಬರಲು ಹೆದರುವಷ್ಟು ಸಾಧಿಸಿ" ಎಂಬ ಮಾತು ನನಗೆ ಬದುಕುವ ಮತ್ತು ಸಾಧಿಸುವ ಛಲ ಹುಟ್ಟಿಸಿತು ಎಂದಾಗ ನಾನು ಬರೆದದ್ದು ಸಾರ್ಥಕವಾಯಿತು ಅನಿಸಿತು. "ಬೀಳಲು ಭಯ ಇರುವವನಿಗೆ ಏಳಲು ಸಾಧ್ಯವಿಲ್ಲ" ಎಂಬ ಮಾತು ಮತ್ತೊಬ್ಬರಿಗೆ ಆತ್ಮವಿಶ್ವಾಸ ಹೆಚ್ಚಿಸಿತು, "ಮಾತು ಮೌನವಾದಾಗ ಮೌನವೇ ಮಾತನಾಡಲಾರಂಭಿಸುತ್ತದೆ" ಎಂಬ ಮಾತು ಅನೇಕರು ಮೌನದಲ್ಲೂ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರೇರಣೆಯಾಗಿದೆ. "ಕುಂಟು ನೆಪಗಳು ಸಾಧನೆಗೆ ಅಡ್ಡಿಯಾಗಬಾರದು" ಎಂಬ ಮಾತು ಕಾರಣಗಳಿಂದಾಚೆ ಬಂದು ಸಾಧನೆಯ ಹಾದಿಯಲ್ಲಿ ಸಾಗುವುದಕ್ಕೆ ದಾರಿದೀಪವಾಗಿದೆ. ಹೀಗೆ ಪ್ರತಿಯೊಂದು ಸಂದೇಶಗಳು ಪ್ರತಿಯೊಬ್ಬರ ಮನಸ್ಸಿನ ಮೇಲೂ ಯಾವುದಾದರೂ ಒಂದು ರೂಪದಲ್ಲಿ ಪರಿಣಾಮ ಬೀರಿದೆ ಹಾಗೂ ಪ್ರೇರಣೆಯಾಗಿದೆ.ಈ ಎಲ್ಲ ಸಂದೇಶಗಳನ್ನು ಒಂದುಗೂಡಿಸಿ "ಸಾವಿರದ ಸತ್ಯ" ಎಂಬ ಪುಸ್ತಕದ ರೂಪದಲ್ಲಿ ಹೊರತರಲಾಗುತ್ತಿದೆ. ಈ ಪುಸ್ತಕ ಹೊರತರಲು ಕಾರಣೀಭೂತರಾಗಿರುವ ತಮಗೆಲ್ಲರಿಗೂ ಹೃದಯಪೂರ್ವಕ ನಮನಗಳು ವಿರೂಪಾಕ್ಷ ಬೆಳವಾಡಿ.