ಜನನಿ (ತಾಯ ಗರ್ಭದಿಂದ ಭೂಗರ್ಭದವರೆಗೆ). ಅಮ್ಮ ಎಂಬ ಮಾತಿಗಿಂತ ಬೇರೆ
ಮಂತ್ರ ಎಲ್ಲಿದೆ, ಅದು ನೀಡೊ
ಶಾಂತಿ ಕಾಂತಿ ಯಾವ ತಾರೆ ರವಿಗಿದೆ. ನಿಜ ಅಮ್ಮನ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅಮ್ಮ ಎಂಬ ಶಬ್ದವೇ ಒಂದು ಅದ್ಭುತವಾದ ಶಕ್ತಿ,ಚೈತನ್ಯ. ಅವಳಿಗೆ ಅವಳೇ ಸಾಟಿ. ತ್ಯಾಗ, ಪ್ರೀತಿ,ಕರುಣೆ,ದಯೆ,ಮಮಕಾರಗಳ ಮೂರ್ತವೆತ್ತ ರೂಪ. ಗುರುವಾಗಿ ಜ್ಞಾನ ಜ್ಯೋತಿಯ ಬೆಳಗಿಸಿದವಳು, ಸ್ನೇಹಿತೆಯಾಗಿ ಭಾವನೆಗಳನ್ನ ಅರ್ಥೈಸಿಕೊಂಡವಳು, ಶಕ್ತಿಯಾಗಿ ಎಲ್ಲಾ ದುಷ್ಟ ಗುಣಗಳನ್ನು ದೂರ ಮಾಡಿದವಳು. ನಿನ್ನ ಬಗ್ಗೆ ಇನ್ನೂ ಎಷ್ಟು ಹೇಳಲಿ? ಎಷ್ಟು ಹೇಳಿದರೂ ಕಡಿಮೆಯೇ.
ಲೋಕ ಪೂಜನಾದರೇನು, ವೇದಶಾಸ್ತ್ರ ಅರಿತರೇನು? ನಿನ್ನ ಋಣವ ತೀರಿಸಲು ಎಷ್ಟು ಜನ್ಮ ಸಾಲದು, ನಿನ್ನ ನೋವು ತ್ಯಾಗ ಮರೆತರೆನಗೆ ಮುಕ್ತಿ ಕಾಣದು. ಪ್ರತಿ ಹೆಣ್ಣಿನಲ್ಲೂ ಮಾತೃ ಗುಣವಿರುವುದರಿಂದ ಪ್ರತಿ ಹೆಣ್ಣು ಮಾತೃ ರೂಪವೇ. ಹುಟ್ಟಿನಿಂದ ಒಂದರಿಂದ ಒಂದುವರೆ ವರ್ಷದವರೆಗೆ ತಾಯಿ ಎದೆಹಾಲು ಕುಡಿದು ಬೆಳೆಯುವ ನಮಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವವಳು ತಾಯಿ. ಬದುಕಿದ್ದಾಗ ಮಾತ್ರವಲ್ಲದೆ ಸತ್ತ ನಂತರವೂ ಅವಳ ಆತ್ಮವೂ ತನ್ನ ಮಗುವಿನ ಬಗ್ಗೆ ಚಿಂತಿಸುವುದರಿಂದ ಅವಳು ನಮ್ಮ ಮೊದಲ ತಾಯಿ, ಆನಂತರ ಜೀವನಪೂರ್ತಿ ಗೋಮಾತೆಯ ಹಾಲನ್ನು ಕುಡಿದು ಬದುಕುತ್ತೇವೆ,ಹಾಗಾಗಿ ಗೋಮಾತೆ ನಮ್ಮೆಲ್ಲರ ಎರಡನೇ ತಾಯಿ. ಬಾಯಾರಿಕೆಯಾದಾಗ ಹಾಲನ್ನು ಕುಡಿದರೆ ತೃಪ್ತಿ ಆಗುವುದಿಲ್ಲ ,ಆಗ ನೀರನ್ನೇ ಕುಡಿಯಬೇಕು. ನೀರು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿದೆ. ನೀರಿಲ್ಲದ ಬದುಕನ್ನ ಕಲ್ಪಿಸಲು ಅಸಾಧ್ಯ ಹಾಗಾಗಿ ಗಂಗಾಮಾತೆ ನಮ್ಮೆಲ್ಲರ ಮೂರನೇ ತಾಯಿ. ಹಸಿವಾದಾಗ ಕೇವಲ ನೀರು ಕುಡಿದರೆ ಸಾಲದು, ಆಹಾರ ಸೇವಿಸಲೇಬೇಕು. ಆಹಾರ ದೊರೆಯುವುದು ಭೂಮಾತೆಯಿಂದ,ಹಾಗೂ ಸತ್ತ ನಂತರ ಭೂಮಾತೆಯ ಗರ್ಭವನ್ನು ಸೇರುವುದರಿಂದ ಅವಳು ನಮ್ಮೆಲ್ಲರ ನಾಲ್ಕನೆಯ ತಾಯಿ. ಹೀಗೆ ತಾಯಿಯ ಗರ್ಭದಿಂದ ಜನಿಸಿ ಭೂಮಾತೆಯ ಗರ್ಭವನ್ನು ಸೇರುವ ತನಕ ನಮ್ಮೆಲ್ಲರಿಗೂ ನಮ್ಮ ಜೀವಿತಾವಧಿಯಲ್ಲಿ ನಾಲ್ಕು ಜನ ತಾಯಂದಿರು ಅವರೇ ಜನ್ಮದಾತೆ, ಗೋಮಾತೆ, ಗಂಗಾಮಾತೆ ಹಾಗೂ ಭೂಮಾತೆ. ಆತ್ಮೀಯ ಬಂಧುಗಳೇ ನನ್ನ ಜನನಿ (ತಾಯ ಗರ್ಭದಿಂದ ಭೂಗರ್ಭದವರೆಗೆ) ಪುಸ್ತಕದಲ್ಲಿ ಈ ಮೇಲಿನ ನಾಲ್ಕು ವಿಷಯಗಳ ಬಗ್ಗೆ ಬರೆದಿದ್ದು, ಒಟ್ಟು 25 ಅಧ್ಯಾಯಗಳಿವೆ. 1)ಅಮ್ಮ ಎಂದರೆ ನೀನಲ್ಲವೇ 2)ಅಮ್ಮನಿಗೆ ಸರಿಸಾಟಿ ಯಾರು?3) ಸತ್ತಾಗ ಏಕೆ ಹೂವು ಹಣ್ಣು ಬದುಕಿದ್ದಾಗಲೇ ತೆರೆಯಲಿ ಕಣ್ಣು 4)ಸಕಲ ಜೀವರಾಶಿಗಳಲ್ಲಿರುವ ತಾಯಿ ಮಗು ಸಂಬಂಧ 5)ತಾಯಿ ದೇವರಲ್ಲವೇ 6)ತಾಯಿಯೇ ಮೊದಲ ಗುರು 7)ನನ್ನ ತಾಯಿ ನನಗೆ ಕಲಿಸಿದ ಆದರ್ಶ ಗುಣಗಳು 8)ಸೇವೆಯ ಅನ್ವರ್ಥ ನಾಮವೇ ತಾಯಿ 9)ತ್ಯಾಗಮಯಿ ತಾಯಿ 10)ಜಗಜ್ಜನನಿ 11)ಮಾತೃದೇವೋಭವ 12)ಗೋವಿನ ಮಹಾತ್ಮೆ 13)ಗೋದಾನ ಮತ್ತು ಗೋಸೇವೆ 14)ಗೋಪೂಜೆ 15)ಗೋವಿನ ಉತ್ಪನ್ನಗಳು 16)ಗೋಹತ್ಯೆ 17)ಗೋಹತ್ಯೆ ಪಾಪದಲ್ಲಿ ನಮ್ಮ ಪಾಲು ಇದೆ 18)ಗೋವಿನ ಉಪಯೋಗ 19)ಗಂಗೆಯ ಮಹತ್ವ 20)ಗಂಗೆಯ ಉಗಮ 21)ಗಂಗೆಯ ಮೇಲಿನ ವೈಜ್ಞಾನಿಕ ಸಂಶೋಧನೆಗಳು 22)ನದಿಗಳ ತಟದಲ್ಲಿ ಉಗಮವಾದ ಸಂಸ್ಕೃತಿ 23)ನೀರಿನ ಜೊತೆಯಲ್ಲಿನ ಬದುಕು 24)ಭೂಮಾತೆ 25)ಕ್ಷಮಯಾಧರಿತ್ರಿ ಹೀಗೆ ಈ ಪುಸ್ತಕವು 25 ಅಧ್ಯಾಯಗಳ 160 ಪುಟಗಳನ್ನ ಒಳಗೊಂಡಿದೆ. ಈ ಪುಸ್ತಕವು ಇದೇ ತಿಂಗಳ 31ನೇ ತಾರೀಕು ಬಿಡುಗಡೆಯಾಗುತ್ತಿದೆ. ತಮ್ಮೆಲ್ಲರ ಸಹಕಾರ, ಸಹಯೋಗ ಹಾಗೂ ಹಾರೈಕೆ ಇರಲೆಂದು ಕೇಳಿಕೊಳ್ಳುತ್ತೇನೆ. ವಿರೂಪಾಕ್ಷ ಬೆಳವಾಡಿ.